Ms. Bhavana Damle has sent an article on Hole Anjaneya temple near Mandya. Please read the article in Kannada.
ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾನದಿ ದಂಡೆಯ ಮೇಲಿರುವ ಆಂಜನೇಯ ದೇವಸ್ಥಾನ “ಹೊಳೆ ಆಂಜನೇಯ” ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿದೆ. ಶ್ರೀಪಾದರಾಜರು ಮತ್ತು ವ್ಯಾಸರಾಜರು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ ಕಾರಣದಿಂದಾಗಿ ಈ ಕ್ಷೇತ್ರ ಪ್ರಖ್ಯಾತವಾಗಿದೆ.ಈ ದೇವಸ್ಥಾನ ಸುಮಾರು ೫೫೦ ವರ್ಷಗಳ ಹಿಂದೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಯಿತು ಎನ್ನಲಾಗಿದೆ.ಈ ಕ್ಷೇತ್ರದಲ್ಲಿ ಪ್ರಾಣದೇವರು ಜಾಗೃತರಾಗಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ.
ಆಂಜನೇಯ ರಾಮಾಯಣ ಕಾಲದಲ್ಲಿ ಹನುಮನಾಗಿ, ಮಹಾಭಾರತದ ಕಾಲದಲ್ಲಿ ಭೀಮನಾಗಿ ಮತ್ತು ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಅವತಾರ ಎತ್ತಿದನೆಂದು ಈ ಮೂರ್ತಿಯಲ್ಲಿ ಬಿಂಬಿಸಲಾಗಿದೆ. ಇಲ್ಲಿರುವ ಹನುಮನ ಮೂರ್ತಿಯ ಎರಡು ಬೆರಳು ಉದ್ದ ಇದ್ದು ಇವು ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತವನ್ನು ಸಂಕೇತಿಸುತ್ತದೆ ಎನ್ನಲಾಗಿದೆ.ಆಂಜನೇಯ ತನ್ನ ಕೈಯಲ್ಲಿ ಸೌಗಂಧಿಕಾ ಪುಷ್ಪ ಹಿಡಿದಿರುವುದು ಭೀಮನ ಅವತಾರವನ್ನು ಪ್ರತಿನಿಧಿಸುತ್ತದೆ. ಆಂಜನೇಯನ ತಲೆಯ ಭಾಗದಲ್ಲಿ ಸೂರ್ಯಚಂದ್ರರಿದ್ದಾರೆ. ಇಲ್ಲಿ ಆಂಜನೇಯನಿಗೆ ಜುಟ್ಟು ಇದ್ದು ಬಾಲದಲ್ಲಿ ಗಂಟೆ ಇದೆ.
ದೇವಸ್ಥಾನದ ಅರ್ಚಕರು ಹೇಳುವಂತೆ ೨೦೦೪ರಲ್ಲಿ ರಾಮನವಮಿಯ ದಿನ ದೇವಸ್ಥಾನದ ಬಾಗಿಲು ಹಾಕಿದ್ದರೂ ಒಳಗಿಂದ ಜಾಗಟೆ-ನಗಾರಿಯ ಶಬ್ದ ಕೇಳಿದ ಅನುಭವ ಅನೇಕರಿಗೆ ಆಗಿದೆ. ಅದೇ ರೀತಿ ೨೦೧೧ರಲ್ಲಿ ಚಂದ್ರಗ್ರಹಣ ಸಮಯದಲ್ಲೂ ದೇವಳದ ಮುಚ್ಚಿದ ಬಾಗಿಲೊಳಗಿಂದ ಶಂಖ-ಜಾಗಟೆ ಬಾರಿಸಿದ ಶಬ್ದದ ಅನುಭವವಾಗಿದೆ.
ಇಲ್ಲಿ ನಡೆವ ಪೂಜೆಯೂ ವಿಶಿಷ್ಟವಾದುದು. ಇಲ್ಲಿ ಬರುವ ಭಕ್ತಾದಿಗಳು ಕೈಯಲ್ಲಿ ರೂ.೧.೨೫ (ಒಂದೂಕಾಲು ರೂಪಾಯಿ) ಹಿಡಿದು ಸಂಕಲ್ಪ ಮಾಡಿಕೊಂಡು ಪೂಜೆ ಮಾಡಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ಪ್ರತೀತಿಯಿದೆ.

